ಕರುಣಳು ಬಾ ಬೆಳೆಕೆ ಅಂಕವು , ದಿನಪತ್ರಿಕೆ ಪ್ರಜಾವಾಣಿ ಪ್ರಕಟವಗುತಿದೆ ಅದ್ರ ಓಟು ಸಂಗ್ರಹದ ಒಂದು ಪುಟ್ಟ ಪ್ರಯತ್ನವೆ ಈ ಬ್ಲಾಗ್ . . .

Wednesday, July 20, 2011

ಕೊಳ್ಳುಬಾಕತನದ ಸಂಸ್ಕೃತಿ

ಇತ್ತೀಚೆಗೆ ನನಗೊಂದು ಫೋನ್ ಬಂದಿತ್ತು. ದೂರದ ಅಮೆರಿಕೆಯಿಂದ. ಫೋನ್ ಮಾಡಿದ್ದು ರಾಧಿಕಾ. ನನ್ನ ಬಹಳ ಹಳೆಯ ವಿದ್ಯಾರ್ಥಿನಿ. ಆಕೆ ಮದುವೆಯಾಗಿ ಅಮೆರಿಕೆಗೆ ಹೋಗಿ ಅಲ್ಲೇ ಉಳಿದಿದ್ದ ವಿಷಯ ತಿಳಿದಿತ್ತು. ಆಕೆ ನನಗೆ ಎಂದೂ ಮೊದಲು ಫೋನ್ ಮಾಡಿಯೇ ಇರಲಿಲ್ಲ. ಅವಳ ವಿಷಯವೇ ಮರೆತು ಹೋಗಿತ್ತು. ಈ ಫೋನ್ ಕರೆ ಮತ್ತೆ ಸೇತುವೆಯನ್ನು ಕಟ್ಟಿತು. ರಾಧಿಕಾ ಸುಮಾರು ನಲವತ್ತೈದು ನಿಮಿಷ ಮಾತನಾಡಿರಬೇಕು. ಆಕೆ ಹೇಳಿದ್ದು ಸಿನಿಮಾ ನೋಡಿದ ಹಾಗೆ ಕಣ್ಣಿಗೆ ಕಟ್ಟಿದೆ.

ರಾಧಿಕಾಳ ಗಂಡ ಎಂಜಿನಿಯರ್. ಒಳ್ಳೆಯ ಮನುಷ್ಯ, ಒಳ್ಳೆಯ ಕೆಲಸ. ವ್ಯಾಪಾರ ನಗರಿಯಾದ ನ್ಯೂಯಾರ್ಕ್‌ನಲ್ಲಿ ಕೆಲಸ. ಮನೆ ಕೂಡ ದೂರವಿರಲಿಲ್ಲ. ಕೈತುಂಬ ಸಂಬಳ, ಒಬ್ಬಳೇ ಮಗಳು, ಬ್ಯಾಂಕಿನಲ್ಲಿ ಸಾಕಷ್ಟು ಹಣ. ಜೀವನ ಚೆನ್ನಾಗಿ ನಡೆಯುತ್ತಿತ್ತು. ರಾಧಿಕಾ ಕೆಲಸ ಮಾಡದೇ ಗೃಹಿಣಿಯಾಗಿ ಸಂತೋಷದಿಂದ ಇದ್ದವಳು.

ಎಲ್ಲವೂ ಒಂದೇ ರೀತಿ ಇದ್ದರೆ ಸಂಸಾರ ಎಂದು ಏಕನ್ನಬೇಕು? ಮೂರು ವರ್ಷಗಳ ಹಿಂದೆ ಅಮೆರಿಕೆಯ ಹಣಕಾಸಿನ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಸಮಾಜ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು. ಕಂಡರಿಯದ ಹಣಕಾಸಿನ ಮುಗ್ಗಟ್ಟು ತಲೆದೋರಿತು. ಕೆಲಸಗಳು ಕಳೆದು ಹೋದವು. ಮನೆಗಳು ಮಾರಾಟಕ್ಕೆ ನಿಂತವು, ಕೊಂಡುಕೊಳ್ಳುವವರಿಲ್ಲದೇ ಖಾಲಿ ಬಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ರಾಧಿಕಾಳ ಗಂಡನ ಕೆಲಸ ಹೋಯಿತು.

ಮನೆಯಲ್ಲಿ ಆತನೊಬ್ಬನೇ ಗಳಿಸುವವನು. ಆರೆಂಟು ತಿಂಗಳು ಉಳಿತಾಯದ ಮೇಲೆಯೇ ಜೀವನ ನಡೆಯಿತು. ಕೂಡಿಟ್ಟ ಹಣ ಜಾಲರಿಯಲ್ಲಿಯ ನೀರಿನಂತೆ ಸೋರಿಹೋಗುತ್ತಿತ್ತು. ಎಲ್ಲಿ ಹೋದರೂ ಕೆಲಸ ದೊರಕಲಿಲ್ಲ. ಆತ ಎಂಥ ಕೆಲಸಕ್ಕೂ ಸಿದ್ಧನಾದ. ಯಾವುದೂ ಸಿಗಲಿಲ್ಲ. ಗಂಡ ಹೆಂಡತಿ ಹೌಹಾರಿದರು. ಭಾರತಕ್ಕೆ ಬಂದರೆ ಯಾವ ಮುಖ ತೋರಿಸುವುದು? ಇಲ್ಲಿಯಾದರೂ ಅವಕಾಶ ಬೇಕಲ್ಲವೇ?

ಇಬ್ಬರೂ ಕುಳಿತು ಚಿಂತೆ ಮಾಡಿದರು. ಎಲ್ಲವನ್ನೂ ಖಾಲಿ ಮಾಡಿ ಭಾರತಕ್ಕೆ ಮರಳಿಬಿಡುವುದೇ? ಇಲ್ಲ, ಪರಿಸ್ಥಿತಿಯನ್ನು ಎದುರಿಸಿ ನಿಂತು ಹೋರಾಡುವುದೇ? ಎರಡನೆಯದೇ ಸರಿ ಎಂದು ತೀರ್ಮಾನಿಸಿದರು. ಮನೆಯ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿತ್ತು. ಮನೆಯ ವಿದ್ಯುಚ್ಛಕ್ತಿ ಬಿಲ್ ಕಟ್ಟದಿದ್ದುದರಿಂದ ಸರಬರಾಜು ಬಂದಾಗಿತ್ತು. ಆಗಲೇ ಡಿಸೆಂಬರ್ ತಿಂಗಳು ಕಾಲಿಡುತ್ತಿತ್ತು. ಹೊರಗಡೆ ತುಂಬ ಚಳಿ, ಶೂನ್ಯ ತಾಪಮಾನದ ಹತ್ತಿರ ಉಷ್ಣತೆ.

ವಿದ್ಯುತ್ ಇಲ್ಲದ ಕಾರಣ ಮನೆಯನ್ನು ಕಾಯಿಸುವ ಉಪಕರಣ ಉಪಯೋಗಿಸುವಂತಿಲ್ಲ. ಪಶ್ಚಿಮದ ಮೂಲೆಯ ಕೊಠಡಿ ಇದ್ದುದರಲ್ಲೇ ಬೆಚ್ಚಗಾಗಿದ್ದುದು. ಪುಟ್ಟ ಮಗುವನ್ನು ಕರೆದುಕೊಂಡು ಮೂವರೂ ಅದೇ ಕೋಣೆಯಲ್ಲಿ ಇರತೊಡಗಿದರು. ರಾಧಿಕಾ ತಾನು ಕೊಂಡಿದ್ದ ಆಭರಣಗಳನ್ನು ಮಾರಿದಳು, ಮನೆಯ ಅಲಂಕಾರಕ್ಕೆ ಪ್ರೀತಿಯಿಂದ ಕೊಂಡಿದ್ದ ಸೋಫಾ ಸೆಟ್ಟು, ರತ್ನಗಂಬಳಿಯನ್ನು ಕೊಟ್ಟಾಯಿತು. ಗಂಡ-ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಮಾಡಿದರು. ನಮಗೆ ತೀರಾ ಅವಶ್ಯಕವಾದ ವಸ್ತುಗಳಾವವು? ಯಾವ ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ?

ಯಾವ ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು? ಪಟ್ಟಿ ತಯಾರಾದ ಮೇಲೆ ಅವರಿಗೇ ಆಶ್ಚರ್ಯವಾಯಿತು. ತಾವು ಮೊದಲೇ ಹೀಗೆ ಯೋಚಿಸಿದ್ದರೆ ಎಷ್ಟೊಂದು ಉಳಿಸಬಹುದಿತ್ತಲ್ಲ ಎಂದು. ತಮ್ಮ ಪಟ್ಟಿಯಂತೆಯೇ ಅಗತ್ಯಗಳನ್ನು ಕಡಿಮೆ ಮಾಡಿ ಬದುಕತೊಡಗಿದರು. ನಿಧಾನವಾಗಿ ಅದೇ ಜೀವನ ಪದ್ಧತಿಯಾಯಿತು. ಪರಿಚಯದ ಗುಜರಾತಿ ವ್ಯಾಪಾರಸ್ಥರು ರಾಧಿಕಾಳಿಗೆ ತಮ್ಮ ಅಂಗಡಿಯಲ್ಲಿ ಕ್ಯಾಶಿಯರ್ ಕೆಲಸ ಕೊಟ್ಟರು. ಸ್ವಲ್ಪ ಜೀವನ ಹಗುರಾಯಿತು. ಕೆಲ ತಿಂಗಳುಗಳ ನಂತರ ಆಕೆಯ ಗಂಡನಿಗೂ ಕೆಲಸ ದೊರಕಿತು. ಮತ್ತೆ ಜೀವನದ ರೈಲು ಹಳಿಯ ಮೇಲೆ ಬಂತು.

ಈಗ ಅವರಿಗೆ ಕಳೆದ ಎರಡು ವರ್ಷಗಳಿಂದ ತಮ್ಮ ಅವಶ್ಯಕತೆಗಳನ್ನು ನಿಯಂತ್ರಿಸುವುದು ಅಭ್ಯಾಸವಾಗಿದೆ. ರಾಧಿಕಾ ಹೇಳಿದಳು,  `ನೀವು ಆವಾಗ ಹೇಳುತ್ತಿದ್ದರಲ್ಲ ಸರ್, ಜೀವನಕ್ಕೆ ಎರಡೇ ಹಾದಿ. ಒಂದು ನಮ್ಮ ಅಗತ್ಯಗಳನ್ನು ಹಿಗ್ಗಿಸಿಕೊಳ್ಳುತ್ತಾ ಅವನ್ನು ತೂಗಿಸಲು ಹೆಣಗುತ್ತ ಕೊರಗುವುದು. ಇನ್ನೊಂದು, ನಮ್ಮ ಅವಶ್ಯಕತೆಗಳನ್ನು ಮಿತಿಯಲ್ಲಿರಿಸಿಕೊಂಡು ಸಂತೋಷ ಪಡುವುದು. ನಾವೀಗ ಎರಡನೆಯದನ್ನೇ ಮಾಡುತ್ತ ಸಂತೋಷದಲ್ಲಿದ್ದೇವೆ. ಇದು ತಾವೇ ನಮ್ಮ ಮನಸ್ಸಿನಲ್ಲಿ ಹಾಕಿದ ಬೀಜ ಸರ್.` ನನಗೆ ತುಂಬ ಸಂತೋಷವಾಯಿತು. ಒಳ್ಳೆಯ ಬೀಜ ಸದಾ ಒಳ್ಳೆಯ ಫಲದ ಮರಗಳನ್ನೇ ಕೊಡುತ್ತದೆ.

ನಮ್ಮ ಜೀವನದ ಬಹುಪಾಲು ಚಿಂತೆ, ಸಂಕಟಗಳು ನಮ್ಮ ಅವಶ್ಯಕತೆಗಳನ್ನು ಹೆಚ್ಚಿಸಿಕೊಳ್ಳುತ್ತ ಅವುಗಳನ್ನು ಪಡೆಯಲು ಮಾಡುವ ಒದ್ದಾಟಗಳು. ಅದಕ್ಕೇ ಗಾಂಧೀಜಿ ಹೇಳಿದರು  ನಮ್ಮಲ್ಲಿ ಎಲ್ಲರ ಅವಶ್ಯಕತೆಗಳನ್ನು ಪೂರೈಸುವಷ್ಟು ಸಾಮಗ್ರಿ ಇದೆ ಆದರೆ ಎಲ್ಲರ ಆಸೆಬುರುಕತನವನ್ನು ಪೂರೈಸುವಷ್ಟಿಲ್ಲ . ಈ ಕೊಳ್ಳುಬಾಕತನದ ಸಂಸ್ಕೃತಿಯ ಕಬಂಧಬಾಹುಗಳಿಂದ ಪಾರಾಗುವುದು ಬಹುಮುಖ್ಯ

No comments:

Post a Comment