ಕರುಣಳು ಬಾ ಬೆಳೆಕೆ ಅಂಕವು , ದಿನಪತ್ರಿಕೆ ಪ್ರಜಾವಾಣಿ ಪ್ರಕಟವಗುತಿದೆ ಅದ್ರ ಓಟು ಸಂಗ್ರಹದ ಒಂದು ಪುಟ್ಟ ಪ್ರಯತ್ನವೆ ಈ ಬ್ಲಾಗ್ . . .

Wednesday, July 20, 2011

ಕೊಳ್ಳುಬಾಕತನದ ಸಂಸ್ಕೃತಿ

ಇತ್ತೀಚೆಗೆ ನನಗೊಂದು ಫೋನ್ ಬಂದಿತ್ತು. ದೂರದ ಅಮೆರಿಕೆಯಿಂದ. ಫೋನ್ ಮಾಡಿದ್ದು ರಾಧಿಕಾ. ನನ್ನ ಬಹಳ ಹಳೆಯ ವಿದ್ಯಾರ್ಥಿನಿ. ಆಕೆ ಮದುವೆಯಾಗಿ ಅಮೆರಿಕೆಗೆ ಹೋಗಿ ಅಲ್ಲೇ ಉಳಿದಿದ್ದ ವಿಷಯ ತಿಳಿದಿತ್ತು. ಆಕೆ ನನಗೆ ಎಂದೂ ಮೊದಲು ಫೋನ್ ಮಾಡಿಯೇ ಇರಲಿಲ್ಲ. ಅವಳ ವಿಷಯವೇ ಮರೆತು ಹೋಗಿತ್ತು. ಈ ಫೋನ್ ಕರೆ ಮತ್ತೆ ಸೇತುವೆಯನ್ನು ಕಟ್ಟಿತು. ರಾಧಿಕಾ ಸುಮಾರು ನಲವತ್ತೈದು ನಿಮಿಷ ಮಾತನಾಡಿರಬೇಕು. ಆಕೆ ಹೇಳಿದ್ದು ಸಿನಿಮಾ ನೋಡಿದ ಹಾಗೆ ಕಣ್ಣಿಗೆ ಕಟ್ಟಿದೆ.

ರಾಧಿಕಾಳ ಗಂಡ ಎಂಜಿನಿಯರ್. ಒಳ್ಳೆಯ ಮನುಷ್ಯ, ಒಳ್ಳೆಯ ಕೆಲಸ. ವ್ಯಾಪಾರ ನಗರಿಯಾದ ನ್ಯೂಯಾರ್ಕ್‌ನಲ್ಲಿ ಕೆಲಸ. ಮನೆ ಕೂಡ ದೂರವಿರಲಿಲ್ಲ. ಕೈತುಂಬ ಸಂಬಳ, ಒಬ್ಬಳೇ ಮಗಳು, ಬ್ಯಾಂಕಿನಲ್ಲಿ ಸಾಕಷ್ಟು ಹಣ. ಜೀವನ ಚೆನ್ನಾಗಿ ನಡೆಯುತ್ತಿತ್ತು. ರಾಧಿಕಾ ಕೆಲಸ ಮಾಡದೇ ಗೃಹಿಣಿಯಾಗಿ ಸಂತೋಷದಿಂದ ಇದ್ದವಳು.

ಎಲ್ಲವೂ ಒಂದೇ ರೀತಿ ಇದ್ದರೆ ಸಂಸಾರ ಎಂದು ಏಕನ್ನಬೇಕು? ಮೂರು ವರ್ಷಗಳ ಹಿಂದೆ ಅಮೆರಿಕೆಯ ಹಣಕಾಸಿನ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಸಮಾಜ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು. ಕಂಡರಿಯದ ಹಣಕಾಸಿನ ಮುಗ್ಗಟ್ಟು ತಲೆದೋರಿತು. ಕೆಲಸಗಳು ಕಳೆದು ಹೋದವು. ಮನೆಗಳು ಮಾರಾಟಕ್ಕೆ ನಿಂತವು, ಕೊಂಡುಕೊಳ್ಳುವವರಿಲ್ಲದೇ ಖಾಲಿ ಬಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ರಾಧಿಕಾಳ ಗಂಡನ ಕೆಲಸ ಹೋಯಿತು.

ಮನೆಯಲ್ಲಿ ಆತನೊಬ್ಬನೇ ಗಳಿಸುವವನು. ಆರೆಂಟು ತಿಂಗಳು ಉಳಿತಾಯದ ಮೇಲೆಯೇ ಜೀವನ ನಡೆಯಿತು. ಕೂಡಿಟ್ಟ ಹಣ ಜಾಲರಿಯಲ್ಲಿಯ ನೀರಿನಂತೆ ಸೋರಿಹೋಗುತ್ತಿತ್ತು. ಎಲ್ಲಿ ಹೋದರೂ ಕೆಲಸ ದೊರಕಲಿಲ್ಲ. ಆತ ಎಂಥ ಕೆಲಸಕ್ಕೂ ಸಿದ್ಧನಾದ. ಯಾವುದೂ ಸಿಗಲಿಲ್ಲ. ಗಂಡ ಹೆಂಡತಿ ಹೌಹಾರಿದರು. ಭಾರತಕ್ಕೆ ಬಂದರೆ ಯಾವ ಮುಖ ತೋರಿಸುವುದು? ಇಲ್ಲಿಯಾದರೂ ಅವಕಾಶ ಬೇಕಲ್ಲವೇ?

ಇಬ್ಬರೂ ಕುಳಿತು ಚಿಂತೆ ಮಾಡಿದರು. ಎಲ್ಲವನ್ನೂ ಖಾಲಿ ಮಾಡಿ ಭಾರತಕ್ಕೆ ಮರಳಿಬಿಡುವುದೇ? ಇಲ್ಲ, ಪರಿಸ್ಥಿತಿಯನ್ನು ಎದುರಿಸಿ ನಿಂತು ಹೋರಾಡುವುದೇ? ಎರಡನೆಯದೇ ಸರಿ ಎಂದು ತೀರ್ಮಾನಿಸಿದರು. ಮನೆಯ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿತ್ತು. ಮನೆಯ ವಿದ್ಯುಚ್ಛಕ್ತಿ ಬಿಲ್ ಕಟ್ಟದಿದ್ದುದರಿಂದ ಸರಬರಾಜು ಬಂದಾಗಿತ್ತು. ಆಗಲೇ ಡಿಸೆಂಬರ್ ತಿಂಗಳು ಕಾಲಿಡುತ್ತಿತ್ತು. ಹೊರಗಡೆ ತುಂಬ ಚಳಿ, ಶೂನ್ಯ ತಾಪಮಾನದ ಹತ್ತಿರ ಉಷ್ಣತೆ.

ವಿದ್ಯುತ್ ಇಲ್ಲದ ಕಾರಣ ಮನೆಯನ್ನು ಕಾಯಿಸುವ ಉಪಕರಣ ಉಪಯೋಗಿಸುವಂತಿಲ್ಲ. ಪಶ್ಚಿಮದ ಮೂಲೆಯ ಕೊಠಡಿ ಇದ್ದುದರಲ್ಲೇ ಬೆಚ್ಚಗಾಗಿದ್ದುದು. ಪುಟ್ಟ ಮಗುವನ್ನು ಕರೆದುಕೊಂಡು ಮೂವರೂ ಅದೇ ಕೋಣೆಯಲ್ಲಿ ಇರತೊಡಗಿದರು. ರಾಧಿಕಾ ತಾನು ಕೊಂಡಿದ್ದ ಆಭರಣಗಳನ್ನು ಮಾರಿದಳು, ಮನೆಯ ಅಲಂಕಾರಕ್ಕೆ ಪ್ರೀತಿಯಿಂದ ಕೊಂಡಿದ್ದ ಸೋಫಾ ಸೆಟ್ಟು, ರತ್ನಗಂಬಳಿಯನ್ನು ಕೊಟ್ಟಾಯಿತು. ಗಂಡ-ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಮಾಡಿದರು. ನಮಗೆ ತೀರಾ ಅವಶ್ಯಕವಾದ ವಸ್ತುಗಳಾವವು? ಯಾವ ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ?

ಯಾವ ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು? ಪಟ್ಟಿ ತಯಾರಾದ ಮೇಲೆ ಅವರಿಗೇ ಆಶ್ಚರ್ಯವಾಯಿತು. ತಾವು ಮೊದಲೇ ಹೀಗೆ ಯೋಚಿಸಿದ್ದರೆ ಎಷ್ಟೊಂದು ಉಳಿಸಬಹುದಿತ್ತಲ್ಲ ಎಂದು. ತಮ್ಮ ಪಟ್ಟಿಯಂತೆಯೇ ಅಗತ್ಯಗಳನ್ನು ಕಡಿಮೆ ಮಾಡಿ ಬದುಕತೊಡಗಿದರು. ನಿಧಾನವಾಗಿ ಅದೇ ಜೀವನ ಪದ್ಧತಿಯಾಯಿತು. ಪರಿಚಯದ ಗುಜರಾತಿ ವ್ಯಾಪಾರಸ್ಥರು ರಾಧಿಕಾಳಿಗೆ ತಮ್ಮ ಅಂಗಡಿಯಲ್ಲಿ ಕ್ಯಾಶಿಯರ್ ಕೆಲಸ ಕೊಟ್ಟರು. ಸ್ವಲ್ಪ ಜೀವನ ಹಗುರಾಯಿತು. ಕೆಲ ತಿಂಗಳುಗಳ ನಂತರ ಆಕೆಯ ಗಂಡನಿಗೂ ಕೆಲಸ ದೊರಕಿತು. ಮತ್ತೆ ಜೀವನದ ರೈಲು ಹಳಿಯ ಮೇಲೆ ಬಂತು.

ಈಗ ಅವರಿಗೆ ಕಳೆದ ಎರಡು ವರ್ಷಗಳಿಂದ ತಮ್ಮ ಅವಶ್ಯಕತೆಗಳನ್ನು ನಿಯಂತ್ರಿಸುವುದು ಅಭ್ಯಾಸವಾಗಿದೆ. ರಾಧಿಕಾ ಹೇಳಿದಳು,  `ನೀವು ಆವಾಗ ಹೇಳುತ್ತಿದ್ದರಲ್ಲ ಸರ್, ಜೀವನಕ್ಕೆ ಎರಡೇ ಹಾದಿ. ಒಂದು ನಮ್ಮ ಅಗತ್ಯಗಳನ್ನು ಹಿಗ್ಗಿಸಿಕೊಳ್ಳುತ್ತಾ ಅವನ್ನು ತೂಗಿಸಲು ಹೆಣಗುತ್ತ ಕೊರಗುವುದು. ಇನ್ನೊಂದು, ನಮ್ಮ ಅವಶ್ಯಕತೆಗಳನ್ನು ಮಿತಿಯಲ್ಲಿರಿಸಿಕೊಂಡು ಸಂತೋಷ ಪಡುವುದು. ನಾವೀಗ ಎರಡನೆಯದನ್ನೇ ಮಾಡುತ್ತ ಸಂತೋಷದಲ್ಲಿದ್ದೇವೆ. ಇದು ತಾವೇ ನಮ್ಮ ಮನಸ್ಸಿನಲ್ಲಿ ಹಾಕಿದ ಬೀಜ ಸರ್.` ನನಗೆ ತುಂಬ ಸಂತೋಷವಾಯಿತು. ಒಳ್ಳೆಯ ಬೀಜ ಸದಾ ಒಳ್ಳೆಯ ಫಲದ ಮರಗಳನ್ನೇ ಕೊಡುತ್ತದೆ.

ನಮ್ಮ ಜೀವನದ ಬಹುಪಾಲು ಚಿಂತೆ, ಸಂಕಟಗಳು ನಮ್ಮ ಅವಶ್ಯಕತೆಗಳನ್ನು ಹೆಚ್ಚಿಸಿಕೊಳ್ಳುತ್ತ ಅವುಗಳನ್ನು ಪಡೆಯಲು ಮಾಡುವ ಒದ್ದಾಟಗಳು. ಅದಕ್ಕೇ ಗಾಂಧೀಜಿ ಹೇಳಿದರು  ನಮ್ಮಲ್ಲಿ ಎಲ್ಲರ ಅವಶ್ಯಕತೆಗಳನ್ನು ಪೂರೈಸುವಷ್ಟು ಸಾಮಗ್ರಿ ಇದೆ ಆದರೆ ಎಲ್ಲರ ಆಸೆಬುರುಕತನವನ್ನು ಪೂರೈಸುವಷ್ಟಿಲ್ಲ . ಈ ಕೊಳ್ಳುಬಾಕತನದ ಸಂಸ್ಕೃತಿಯ ಕಬಂಧಬಾಹುಗಳಿಂದ ಪಾರಾಗುವುದು ಬಹುಮುಖ್ಯ

Tuesday, July 19, 2011

ರೋಷದ ಮಾತು

ರಾಮಾಯಣದ ಯುದ್ಧ ಕಾಂಡದಲ್ಲಿ ಬರುವ ಸನ್ನಿವೇಶ ಇದು. ರಾವಣನ ಮಗನಾದ ಇಂದ್ರಜಿತ್ತು ಯುದ್ಧಕ್ಕೆ ಬಂದು ಮಾಯಾಯುದ್ಧವನ್ನು ಪ್ರಾರಂಭಿಸುತ್ತಾನೆ. ಆಕಾಶದ ಮೋಡಗಳ ಹಿಂದೆ ಅವಿತುಕೊಂಡು ಬಾಣಗಳ ಮಳೆಗರೆಯುತ್ತಾನೆ. ಕ್ಷಣಕ್ಷಣಕ್ಕೆ ದಿಕ್ಕುಗಳನ್ನು ಬದಲಿಸುತ್ತ ಕಪಿಸೇನೆಯನ್ನು ಕಂಗೆಡಿಸುತ್ತಾನೆ. ನಂತರ ಮಾಯಾಸೀತೆಯನ್ನು ಯುದ್ಧಭೂಮಿಗೆ ಕರೆತರುತ್ತಾನೆ. ಈ ವಿವರಗಳನ್ನು ವಾಲ್ಮೀಕಿ ಮುನಿಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

ಆತ ಆ ಮಾಯಾಸೀತೆಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾನೆ. ಪೆಟ್ಟು ತಾಳಲಾರದೇ ಆ ಸೀತೆ  ಅಯ್ಯೋ ರಾಮ, ರಾಮ  ಎಂದು ಕೂಗಿಕೊಂಡು ಅಳುತ್ತಾಳೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಎಳೆದು ಖಡ್ಗದಿಂದ ಹೊಡೆಯುತ್ತಾನೆ. ಈ ದೃಶ್ಯವನ್ನು ನೋಡಲಾಗದೇ ಆಂಜನೇಯ ಅವನಿಗೆ ಶಾಪಕೊಡುತ್ತಾನೆ, ಕಪಿಗಳನ್ನು ಸೇರಿಸಿಕೊಂಡು ಇಂದ್ರಜಿತ್ತುವಿನ ಕಡೆಗೆ ನುಗ್ಗುತ್ತಾನೆ.
ಆಗ ಇಂದ್ರಜಿತ್ತು ಮಾಯಾಸೀತೆಯನ್ನು ಕೊಂದು ಕೆಳಗೆ ಎಸೆದುಬಿಡುತ್ತಾನೆ. ಯಾವ ಹೆಂಗಸು ನೆಲಕ್ಕೆ ಹೀಗೆ ಬಿದ್ದರೆ ಅದು ದುಃಖಕಾರಕವೇ. ಅದರಲ್ಲೂ ಸೀತೆಯಂಥ ಸಾಧ್ವಿಗೆ ಈ ಸ್ಥಿತಿ ಬಂದಾಗ ಯಾರು ಸಹಿಸುತ್ತಾರೆ?

ಹನುಮಂತ ಕಪಿಸೇನೆಯನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ಇಂದ್ರಜಿತ್ತು ಸೀತೆಗೆ ಹೊಡೆದದ್ದನ್ನು ನಂತರ ಆಕೆಯನ್ನು ಕೊಂದುಹಾಕಿದ್ದನ್ನು ಹೇಳುತ್ತಾನೆ. ಈ ಮಾತನ್ನು ಕೇಳಿ ಶ್ರೀರಾಮನು ದುಃಖದಿಂದ ಬಸವಳಿದು, ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬೀಳುತ್ತಾನೆ. ಅಣ್ಣ ಹೀಗೆ ಮೂರ್ಛೆ ಹೋಗಿ ಬಿದ್ದದ್ದನ್ನು ಕಂಡು ಲಕ್ಷ್ಮಣ ತನ್ನಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ದುಃಖಪಡುತ್ತಾನೆ. ಅವನ ಮನಸ್ಸಿನ ರೋಷ ಭುಗಿಲ್ಲೆಂದು ಎದ್ದಿದೆ. ಅವನ ಮಾತುಗಳು ಆ ಕೋಪವನ್ನು ಪ್ರಕಟಿಸುತ್ತವೆ.

 ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ 
-ಸರ್ಗ 83, ಶ್ಲೋಕ 14.

ಅಣ್ಣಾ, ಜಿತೇಂದ್ರಿಯನಾಗಿ ಸದಾಚಾರದಲ್ಲೇ ನಿರತನಾದವನು ನೀನು. ಧರ್ಮವು ನಿನ್ನನ್ನು ಅನರ್ಥಗಳಿಂದ ಪಾರುಮಾಡಲು ಶಕ್ತವಾಗಲಿಲ್ಲ. ಧರ್ಮವೆಂಬುದು  ನಿರರ್ಥಕ.

ದುಃಖತಪ್ತನಾದ ಲಕ್ಷ್ಮಣನ ಬಾಯಿಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಜ್ಜನ, ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? 

ಧರ್ಮವೆಂಬುದು ನಿರರ್ಥಕವಾದದ್ದು. ನಮಗೆಲ್ಲ ಹೀಗೆ ಪದೇ ಪದೇ ಎನ್ನಿಸುತ್ತಿಲ್ಲವೇ? ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!

ಲಕ್ಷ್ಮಣ ಇನ್ನೂ ಮುಂದುವರಿದು ಹಣವಿಲ್ಲದವನ ಪಾಡು ಯಾರಿಗೂ ಬೇಡ, ಎಲ್ಲವೂ ಹಣವಿದ್ದವರಿಗೆ ಮಾತ್ರ ದಕ್ಕುತ್ತದೆ ಎಂದು ಸಂಕಟಪಡುತ್ತಾನೆ.

 ಯಸ್ಯಾರ್ಥಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ

 ಹಣವಿದ್ದವನಿಗೆ ಎಲ್ಲರೂ ಮಿತ್ರರೇ, ಎಲ್ಲರೂ ಬಂಧುಗಳೇ! ಈ ಲೋಕದಲ್ಲಿ
ಹಣವಂತನೇ ಪುರುಷ, ಹಣವಂತನೇ ಪಂಡಿತ; ಹಣವುಳ್ಳವನೇ ಪರಾಕ್ರಮಿ,
ಅವನೇ ಬುದ್ಧಿವಂತ! ಹಣವುಳ್ಳವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಇದು ರಾಮಾಯಣದ ಕಾಲದ ಮಾತೇ ಎಂದು ಆಶ್ಚರ್ಯವಾಗುತ್ತದಲ್ಲವೇ? ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಯಾವ ಕಾಲದಲ್ಲೂ ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದಿಂದಲೇ ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಧರ್ಮ ನಿಷ್ಪ್ರಯೋಜಕ ಎನ್ನಿಸೀತು. ಆದರೆ ಅದು ಸರಿಯಲ್ಲ. ಮುಂದೆ ರಾಮಾಯಣದಲ್ಲಿ ಇದೇ ಲಕ್ಷ್ಮಣ ಅಣ್ಣ ಶ್ರೀರಾಮನ ಧರ್ಮರಕ್ಷಣೆಗೆ ಒತ್ತಾಸೆಯಾಗಿ ನಿಂತು ಹೋರಾಡಿ ಅಧರ್ಮಿ ರಾವಣನ ಪರಿವಾರವನ್ನು ಕೊಂದದ್ದನ್ನು ನೋಡಿದ್ದೇವೆ. ಇಂದಿಗೂ ಕೆಲಕಾಲ ಮದಾಂಧರಾಗಿ, ಅಧರ್ಮದಿಂದ ಹಣಗಳಿಸಿ ಮೆರೆದು ಈಗ ಜೈಲಿನ ಕಂಬಿಗಳ ಹಿಂದೆ ತೋರಿಕೆಯ ಪಶ್ಚಾತ್ತಾಪದ ಕಣ್ಣೀರು ಸುರಿಸುವವರನ್ನೂ ಕಂಡಿದ್ದೇವೆ.

ಅಧರ್ಮ ದೀಪಾವಳಿಯಲ್ಲಿ ಮಕ್ಕಳು ಹಚ್ಚುವ ಬೆಂಕಿಯ ಕುಂಡದಂತೆ. ಅದು ಬಣ್ಣಬಣ್ಣದ ಕಿರಣಗಳನ್ನು, ಕಿಡಿಗಳನ್ನು ಹಾರಿಸುತ್ತ ಕಣ್ಣು ಕೋರೈಸುವಾಗ ತುಂಬ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ಉರಿಯುವುದು ಕ್ಷಣಕಾಲ ಮಾತ್ರ. ಮತ್ತೆ ಅಂಧಕಾರ. ಧರ್ಮ, ದೇವರ ಮುಂದೆ ಹಚ್ಚಿದ ನಂದಾದೀಪ. ಅದು ಕಣ್ಣು ಕೋರೈಸಲಾರದು, ಆದರೆ ಹೆಚ್ಚು ಕಾಲ ಬದುಕುವಂಥದ್ದು, ನೆಮ್ಮದಿ ನೀಡುವಂಥದ್ದು. ಅದು ನಮಗೆ ಬೇಕಾದದ್ದು.